Saturday 12 December 2020

ಹಸಿದ ಹೊಟ್ಟೆಗೆ ನೀನೆ ಅಮೃತ

ನಿನ್ನ‌ ಸಲುಗೆಯ ಒಲವಿನೂಟವ
ಹೆಚ್ಚು ಹೆಚ್ಚು ನೀ ಬಡಿಸಿದೆ
ಬೇಡವೆಂದರು ತುತ್ತು‌ಮಾಡಿ
ನಿನ್ನ ಕೈಯಾರೆ ತಿನಿಸಿದೆ


ಹಸಿದ ಹೊಟ್ಟೆಗೆ ನೀನೆ ಅಮೃತ
ಕುಸಿದ ಜೀವಕೆ ನೀನೆ ಪ್ರೇರಿತ
ನಿನ್ನ ಸನಿಹವೆ ಮನಸಿಗೆ ಹಿತ
ಪ್ರೀತಿಯೊಂದೆ ಜಗದಿ ಶಾಶ್ವತ


ನಾನು ನನ್ನದು ಎಂಬ ಮೋಹಕೆ
ಬಿದ್ದ ಮಾನವ ಉಳಿವನೆ?
ನನ್ನದೆಲ್ಲವು ನಿನ್ನದೆನ್ನುತ
ಹಂಚಿ ತಿನ್ನವ ಕಳೆವನೆ?
 
ಕಲಿಸಿ ಪ್ರೀತಿಯ ನೀನು ನನಗೆ
ಬದಲಿಸಿದೆ ಜಗ ನೋಡುವ ದೃಷ್ಟಿ
ಒಬ್ಬರೊಬ್ಬರ ಅಪ್ಪಿಕೊಂಡರೆ
ಮತ್ತಷ್ಟು ಸುಂದರ ಈ ಸೃಷ್ಟಿ.


-SoNi

ಕರಗಲಿಲ್ಲ ಹೊಟ್ಟೆ

 ಐದಾರು ಮೈಲಿ ಓಡಿದರು ದಿನ
ಕರಗಲಿಲ್ಲ ಹೊಟ್ಟೆ
ಬೆಳಗಿನ ಉಪಗಾರ ತಿನ್ನುವುದನ್ನೆ ಬಿಟ್ಟೆ
ಕರಗಲಿಲ್ಲ ಹೊಟ್ಟೆ
ವ್ಯಾಯಮ ಯೋಗ ಮಾಡಿದರು
ಕರಗಲಿಲ್ಲ ಹೊಟ್ಟೆ
ತಿಂದೆ ದಿನಕ್ಕೆರಡು ಮೊಟ್ಟೆ
ಆದರೂ ಕರಗಲಿಲ್ಲ ಹೊಟ್ಟೆ
ತುಂಬಿತು ವರ್ಷಗಳಿಂದ ಖಾಲಿ ಇದ್ದ ನಮ್ಮೂರ ಕಟ್ಟೆ
ಸ್ವಲ್ಪವೂ ಕರಗಲಿಲ್ಲ ನನ್ನೊಟ್ಟೆ
ಚಿಕ್ಕದಾದೊ ಎಲ್ಲ ಬಟ್ಟೆ
ಕರಗಲೆ ಇಲ್ಲ ಈ ಡೊಳ್ಳು ಹೊಟ್ಟೆ
ಒಮ್ಮೆ ಬಂದರೆ ಹೋಗಲಾರೆ ಎಂದು
ಶಪಥ ಮಾಡಿಹುದೆ ಈ ಹೊಟ್ಟೆ
ಈಗ ಇದು ಎಲ್ಲರಲ್ಲು ಸಾಮಾನ್ಯವಾಗಿರುವುದ
ನೋಡಿ‌ ಕೇಳಿ ಸುಮ್ಮನಾಗಿಬಿಟ್ಟೆ
ಆದರೂ ಬಿಡುವುದಿಲ್ಲ ಓ ಹೊಟ್ಟೆ
ನಿನ್ನ ಕರಗಿಸಿದಿದ್ದರೆ ನಾ ಕೆಟ್ಟೆ.


(ಬೊಜ್ಜನು ದ್ವೇಷಿಸುವವ ಎಲ್ಲ ಮಿತ್ರವೃಂದದ ಪರವಾಗಿ) 😂😃
-SoNi

ಯಾರಿಗೇಳಲಿ‌ ನೋವ

ಯಾರಿಗೇಳಲಿ‌ ನೋವ
ಕೇಳುವಳೆ ಮುನಿದಿರುವಾಗ
ಹೇಳಿದರು ಕೇಳುವ ಸಹನೆ‌ ಇಲ್ಲ
ಹಠವ ಮುಂದಿಟ್ಟು ಕುಳಿತಿಹಳಲ್ಲ


ಎದುರು ನಿಂತರು ನೋಡುವುದಿಲ್ಲ
ಹೆದರಿ ಅತ್ತರು ತಿರುಗುವುದಿಲ್ಲ
ಎನಗೆ ಅವಳಲ್ಲದೆ ಬೇರಿಲ್ಲ
ಅವಳು ನುಡಿಯದೆ ಖುಷಿಯಿಲ್ಲ


ದೋಷಿಯಂತೆ ಕಾಣುವಳೆನ್ನ
ದೂರು ಹೊರಿಸಿ ಕೆಣಕುವಳು
ರೋಸಿ ಹೋದ‌ ಜೀವಕೆ ಇನ್ನ
ಎಷ್ಟು ನೋವನು ಕೊಡುವಳು


ನಗುವ ಮೊಗದಿ ದೇವತೆ ಅವಳು
ನೋಡಿ ನಲಿದ ಮಗು ನಾನು
ಇಂದು ಬರಿ ದುಗುಡ ಹಗಲು ಇರುಳು
ನೊಯಿಸಿ ನೋಯುವ ಮರ್ಮವೇನು?.


ಕಾವ್ಯವಲ್ಲಭ
SoNi

ಜನಿಸಿದೆ ನೀನು

ಜನಿಸಿದೆ ನೀನು
ನನ್ನ ಹೃದಯದ ತಾಳವ ನುಡಿಸಲು
ಜನಿಸಿದೆ ನೀನು
ನನ್ನ ಒಲವಿನ‌ ರಾಗ ರಂಗೇರಿಸಲು
ನಿನ್ನ ಭಾವದ ಲಹರಿ
ನನ್ನ ಜೀವನ ದಾರಿ
ನಿನ್ನನು ಪಡೆದು ನಾ ಧನ್ಯನಾದೆ ನಾರಿ
ಜನಿಸಿದೆ‌ ನೀನು
ನನ್ನ ಕನಸಿಗೆ ನೀರನು ಎರೆಯಲು
ಜನಿಸಿದೆ ನೀನು
ನನ್ನ ಬದುಕಿಗೆ ಬೆಳಕನು ಹಚ್ಚಲು
ನಿನ್ನ ಮೊಗವನು ಕಂಡರೆ ಸಾಕು
ಮನವು ಗರಿ ಬಿಚ್ಚುವುದು ಹಾರಲು
ನಿನ್ನಲೆ ಇರುವುದು ಜೀವವು
ನೀನೆ ಪ್ರೇಮದ ದೈವವು
ಜನಿಸಿದೆ ನೀನು
ನನ್ನ ತಪ್ಪೆಲ್ಲ ತಿದ್ದಲು
ಜನಿಸಿದೆ ನೀನು
ನನ್ನ ಒಪ್ಪಿ ಮುದ್ದಾಡಲು
ಧನ್ಯನು‌ ನಾನು
ನೀನೆ ಭೂಮಿ ಭಾನು
ಜೀವನವೆಲ್ಲ ನಿನ್ನಲೆ ಶರಣು.

SoNi

ಬದುಕು‌ ಹೀಗೇಕೆ‌ ಕಾಡುವುದು

 ಬದುಕು‌ ಹೀಗೇಕೆ‌ ಕಾಡುವುದು

ಬದುಕು ಹೀಗೇಕೆ‌ ಕಾಡುವುದು
ಎಲ್ಲೊ‌ ಇರುವ ಮನಸುಗಳ ಬೆರೆಸಿ
ಆಡುವುದು ಆಡುವುದು
ದಿನವೆಲ್ಲಾ ಜೊತೆಯಲ್ಲೆ ಇರುವಂತೆ ಮಾಡಿ
ನಗಿಸುವುದು, ನಲಿಸುವುದು
ಮತ್ತೊಮ್ಮೆ ದೂರ ದೂರ ಇರಿಸಿ
ನರಳಿಸುವುದು, ಕೊರಗಿಸುವುದು
ಬದುಕು‌ ಹೀಗೇಕೆ‌ ಕಾಡುವುದು
ಆಸೆನಾ ಅರಳಿಸಿ, ಅರಿವನ್ನು ಛೇಡಿಸಿ
ತಮಾಷೆ ಮಾಡುವುದು, ತಮಾಷೆ ನೋಡುವುದು
ಪ್ರೀತಿನ‌‌ ಮೆರೆಸಿ ಇದ್ದಕ್ಕಿದ್ದಂತೆ ಬಾಡಿಸಿ
ಅವಮಾನಿಸುವುದು, ನೋಯಿಸಿ ನಗುವುದು
ಬದುಕು‌ ಹೀಗೇಕೆ‌ ಕಾಡುವುದು
ಬಾ ಎಂದು ಅಪ್ಪುವುದು
ಹೋಗೆಂದು ದೂಡುವುದು
ನಿತ್ಯವು ತರ ತರ ಬಣ್ಣವ ಬಳಿದು
ಕುಣಿಸುವುದು, ಕುಡಿಸುವುದು
ಬದುಕು‌ ಹೀಗೇಕೆ‌ ಕಾಡುವುದು
ಭರವಸೆಯ ಹರಿಸುವುದು
ಕನಸುಗಳ ಪೋಣಿಸುವುದು
ಎಲ್ಲವ ಸುಟ್ಟು ಇದೆ ನಿನ್ನ ಹುಟ್ಟು
ಎಂದು ಕುಗ್ಗಿಸುವುದು, ತಲೆ ತಗ್ಗಿಸುವುದು
ಬದುಕು‌ ಹೀಗೇಕೆ‌ ಕಾಡುವುದು
ಬದುಕು ಹೀಗೇಕೆ‌ ಕಾಡುವುದು

- SoNi

ನಿನ್ನನ್ನ ನೀನೆ‌ ಸುಡುವೆ ಏಕೆ

ನಿನ್ನನ್ನ ನೀನೆ‌ ಸುಡುವೆ ಏಕೆ
ಕೋಪದಿ ಉರಿದು ಮರುಗುವೆ ಹೀಗೇಕೆ
ಸಂಕಟದಿ ನರಳಿ ನರಳಿ
ಎಲ್ಲಾನು ಅಳೆದು ತೂಗುವೆ
ಮತ್ತೇನೊ‌ ಕಳೆದುಕೊಂಡಂತೆ
ಒಬ್ಬಳೆ ಅಳುವೆ
ನಾನಲ್ಲ ದೋಷಿಯು
ನಾ ನಿನ್ನ ವಿಶ್ವಾಸಿಯು
ನಿನ್ನ ಒಲವ ಬಯಸಿ ಬಯಸಿ
ದಿನವು ಸೋತ ಪ್ರೇಮಿಯು
ನೋವುಣಿಸಿ ನಾನು ನಿನಗೆ
ಏನನ್ನ ಪಡೆಯಲಿ
ನೀ ನೊಂದು ಕೂತರೆ
ನಾ ತಾನೆ ಹೇಗೆ ನಲಿಯಲಿ
ನಿನ್ನ ನೋವೂ ನನ್ನದೆಂಬುದ
ನೀನೆ‌ನೆ ಮರೆತೆಯ..
ನೀ ನನ್ನ ಜರಿದೆಯ...
ನೋವೆ ಆದರೆ ನಾನು
ಸುಳಿಯಲ್ಲ ಹತ್ತಿರ
ದೂರದಿ ನೋಡುತ ಕೂತು
ನುಡಿಸುವೆ ಹಿತ ಸ್ವರ
ನೆಮ್ಮದಿಯ ಬಯಸುವೆ ನಿನಗೆ
ನಾನಗಲಾರೆ ಅಪ ಸ್ವರ
ನಮ್ಮ ಪ್ರೀತಿಗೆ ಎಂದಿಗೂ
ಸಿಗದು ಉತ್ತರ.


-SoNi

ತೊರೆದು‌ ಜೀವಿಸಬಹುದೆ ನಲ್ಲೆ ಈ ಪ್ರೀತಿಯನು

ತೊರೆದು‌ ಜೀವಿಸಬಹುದೆ ನಲ್ಲೆ ಈ ಪ್ರೀತಿಯನು
ತೊರೆದು ಜೀವಿಸಬಹುದೆ ನಲ್ಲೆ ಈ ಪ್ರೀತಿಯನು
ತೊರೆಯುವ ಮನಸು ಮಾಡಿದ್ದಾದರು ಹೇಗೆ??
ತೊರೆಯುವ ಮನಸು ಮಾಡಿದ್ದಾದರು ಹೇಗೆ??
ಸುಮ್ಮನೆ ಕುಳಿತರು‌ ನಿನ್ನ ಧ್ಯಾನವೆ ದಿನವು
ಸುತ್ತ ತಿರುಗಿದರು ನಿನ್ನೆ ಕಾಣುವೆ ಕ್ಷಣವು
ನಿನ್ನಲೆ ಜೀವಿಸುವ ನನ್ನ‌ ನೀ ತೊರೆದರೆ
ಮೆಚ್ಚುವನೆ ಪರಮಾತ್ಮ, ಗೆಲ್ಲುವುದೆ ಪ್ರೀತಿ?
ಮರೆಯಾಗುವುದೆ ನಿನ್ನೆಲ್ಲ ನೋವು
ಹೊರೆಯಾಗದೆ ನನ್ನ ನೆನಪ ಕಾವು
ನನ್ನ ಮರೆತು ನಗಬಲ್ಲೆಯೇನು ನೀ
ನಗಬಲ್ಲೆಯೇನು ನೀ.....
ನಿನ್ನ ಹೊರತು ಗೆಲ್ಲಬಲ್ಲೆನೇನು ನಾ
ಗೆಲ್ಲಬಲ್ಲೆನೇನು ನಾ...
ಒಲವ ಕಂದನ‌ ತಳ್ಳಿ, ಒಳಗೊಳಗೆ ಬೇಯಲು
ಅಣಿಮಾಡಿ ಪಂಜು‌ ಹಿಡಿದು ಅಳುವೆ ಒಬ್ಬಳೆ‌ ಏಕೆ
ಪ್ರೀತಿಯ ಅರ್ಥ ತೊರಿಸಿದ ನೀನೆ
ಸೋತಂತೆ ಸೊರಗಿ ದಿನವು ಕೊರಗುವೆ ಏಕೆ..
ನನ್ನ‌ ಮರೆತುಬಿಟ್ಟರು ನೀ
ಮರೆಯಬಲ್ಲೆಯ ನಮ್ಮ‌ ಪ್ರೀತಿಯ?
ನನ್ನ ನೆನಪೆಲ್ಲ‌ ಸುಟ್ಟರು ನೀ
ಸುಡಬಲ್ಲೆಯ ನಿನ್ನದೆ ಅಸ್ತಿಯ
ನಿನ್ನ‌ ಪ್ರತಿ‌ ಉಸಿರಲ್ಲು ಬೆರೆತಿರುವ ನನ್ನ
ತೊರೆಯಬಲ್ಲೆಯ, ತೊರೆದು ಜೀವಿಸಬಲ್ಲೆಯ?
ತೊರೆಯಬಲ್ಲೆಯ, ತೊರೆದು ಜೀವಿಸಬಲ್ಲೆಯ?


-ಕಾವ್ಯವಲ್ಲಭ
SoNi

(ತೊರೆದು‌ ಜೀವಿಸಬಹುದೆ ಹರಿ‌ ನಿನ್ನ ಚರಣಗಳ ಹಾಡು‌ ಎದೆಯಲ್ಲಿ ಪದೆ ಪದೆ ಗುನುತ್ತಿದ್ದಾಗ‌, ಮೂಡಿದ ಪ್ರೇಮ ಕವಿತೆ)

ನನ್ನೆದೆಯ ಗೂಡಿನಲಿ ನಿನ್ನೊಲವ ರಾಗವಿದೆ

 ನನ್ನೆದೆಯ ಗೂಡಿನಲಿ ನಿನ್ನೊಲವ ರಾಗವಿದೆ
ತಿರುಚಿದರು ತಡಕಿದರು ಬರಿ‌ ಅದರ ಸ್ವರವೆ
ಬದಲಿಸಲು ಬಾರದೆನೆಗೆ ಆ ರಾಗದ ಒಲವ
ಪದೆ ಪದೆ ಎದೆಯಲ್ಲಿ ಅದರದ್ದೆ ತಾಂಡವ


ನನ್ನೆದೆಯ ಗೂಡಿನಲಿ ನಿನ್ನೊಲವ ರಾಗವಿದೆ
ತಿರುಚಿದರು ತಡಕಿದರು ಬರಿ‌ ಅದರ ಸ್ವರವೆ


ಗುಣುಗುತಿರಲಿ ಹೀಗೆ ಗುಣುಗುತಿರಲಿ ಹೀಗೆ
ಬದುಕಿರುವ ಕೊನೆವರೆಗೆ ನಿನ್ನೊಲವ ಹಾಡು
ನಿನ್ನದೆ ರಾಗವಿದು ನಾ ಗೆಲ್ಲುವ ಭರವಸೆಯು
ನಿನ್ನದೆ ತಾಳವಿದು ನನ್ನ ಖುಷಿಯ ದೀಪವು
ಬೆಳಕಾಗಿ ನೀ ಮನಕೆ ಒಲವಾದೆ ಬದುಕಿಗೆ
ನಿನ್ನ ಹಾಡಲೆ ಜೀವಿಸಿ ನಾ ಕಳೆವೆ ಪ್ರತಿಗಳಿಗೆ
ನನ್ನೆದೆಯ ಗೂಡಿನಲಿ‌ ನಿನ್ನೊಲವ ರಾಗವಿದೆ
ತಿರುಚಿದರು ತಡಕಿದರು ಬರಿ ಅದರ ಸ್ವರವೆ
ಬರಿ‌ ಅದರ ಸ್ವರವೆ.


ಕಾವ್ಯ ವಲ್ಲಭ
SoNi

ಒಂಟಿ ಜೀವಕೆ ........ಶುಂಠಿ ಕಷಾಯ!

ಒಂಟಿ ಜೀವಕೆ ಶುಂಠಿ ಕಷಾಯ
ಎಷ್ಟು ಕುಡಿದರು ಮಾಗದು ಗಾಯ
ಅವಳ ನೆನಪಲ್ಲೆ ಕಳೆದೋಗಲಿ ಪ್ರಾಯ
ಪ್ರೀತಿಸಿದ ತಪ್ಪಿಗೆ ಅನುಭವಿಸುವೆ ಶಿಕ್ಷೆಯ

ಒಂಟಿ ಜೀವಕೆ ........ಶುಂಠಿ ಕಷಾಯ!

ನಡೆದುಹೋಗಲಿ ಇಂದೇ ಸಮರ
ನಾನ? ಅವಳ? ಪ್ರೀತಿ ಯಾರ ಪರ?
ನೀಡಿದ ಭರವಸೆಯ ಹುಸಿಯಾಗಿಸಿ
ಕಿಸಿಕಿಸಿ‌ ನಗುವ ಅವಳಿಗೆ ಧಿಕ್ಕಾರ
ನೋಡೆಬಿಡುವ ಯಾರು ಗೆಲುವರು
ಪರಿಸ್ಥಿತಿಗೆ ಸೋತು ಶರಣಾದ ಅವಳ
ಅವಳಿಗೆ ಸೋತು ಸಾಯುತ್ತಿರವ ನಾನ?
ಹರೆಯದ ವಯಸ್ಸಲ್ಲಿ, ಆತುರದ ಮನಸ್ಸಲ್ಲಿ
ಮೂಡಿ ಮೋಡಿ ಮಾಡಿದ ಈ ಕಪಟ ಪ್ರೀತಿಯ
ನೋಡೆಬಿಡುವ ಯಾರು ಗೆಲುವರು

ಪ್ರೀತಿ ಪ್ರೀತಿ ಅಂತ ನನ್ನನ್ನೆ ನಾನು ಮರೆತ
ಆ ದಿನಗಳು ಮತ್ತೆ ನನಗೆ ಸಿಗಬಹುದೆ?
ಇನ್ನೊಮ್ಮೆ ಹಿಂದೆ ಹೋಗಿ ನನ್ನ ಅಸ್ತಿತ್ವವನ್ನ ನಾನು ಹುಡುಕಬಹುದೇ?
ಬರಬಹುದೆ ಮತ್ತೆ ಆ ಸಮಯವು ಎದುರು ಬರಬಹುದೇ?

ನಿರಾಶೆಯಲ್ಲು ಬದುಕುವ ಛಲ ಹುಟ್ಟಿದೆ
ದಿನವು ಸತ್ತರು, ಮತ್ತೆ ಎದ್ದು ಬದುಕ ನಡೆಸುವೆ
ನನ್ನ ನಾನೆ ಪ್ರೀತಿಸುತ್ತ ಜಗವ ಗೆಲ್ಲುವೆ
ಜಗದ ಪ್ರೀತಿ ಸವಿಯುತ್ತ ಬಾಳ ಸವೆಸುವೆ.

ಒಂಟಿಯಾದರೇನಂತೆ? ನಾನಿನ್ನು ಬದುಕಿರುವೆ!!

- SoNi

ನಿನ್ನ ಆರಾಧಿಸುವ... ಭಕ್ತ! ನಾನು.

ನಿಸರ್ಗವೇ ನಾಚುವಂತ
ಅಂದ ಕೊಟ್ಟ ಆ ದೇವನು
ಆ ಚಂದ್ರನೇ ಜಾರಿ ಬಿದ್ದು
ನಿನ್ನಲಿಗೆ ಓಡಿ ಬಂದನು
ನಿನ್ನೆಲ್ಲ ಆಸೆಗಳು ನನ್ನಂತೆಯೆ
ನನ್ನೆಲ್ಲ ಪ್ರತಿ ಕ್ಷಣವು ನಿನಗಾಗಿಯೆ!
ಒಲವ ದೇವಿ ನೀನು..
ನಿನ್ನ ಆರಾಧಿಸುವ... ಭಕ್ತ! ನಾನು.

-SoNi

ನಿನ್ನ ಹೊರತು‌ ನಾನು ಏನಾದರೇನು

ನಿನ್ನ ಹೊರತು‌ ನಾನು ಏನಾದರೇನು
ನೀನೆ ಇರದ ಮೇಲೆ‌ ಗೆಲುವು ಶೂನ್ಯವಿನ್ನು
ನಿನ್ನ ನೆನಪಿನಲ್ಲೆ ಕಾಲ ಕಳೆಯಲೇನು
ನೀನು‌ ಕಲಿಸಿಕೊಟ್ಟ ಒಲವೆ ನಿತ್ಯ ಜೇನು


ನೀನೆ ಬದುಕೆಂದು ಹೇಳಾಯ್ತು ಎಂದೊ
ಜೊತೆಗಿರು, ಇರದಿರು ನೀ ನನ್ನ ಬಂಧೋ
ಎರಡು ಮನಸು ಸಾಕು ದಿನವೂ ಸೇರಲು
ಎರಡು ದೇಹ ಮೋಹ ಕ್ಷಣದ ಘಮಲು


ಅಗ್ನಿ ಬೇಡ ಅಕ್ಷತೆ ಬೇಡ‌ ನಮ್ಮ ಮದುವೆಗೆ
ಗಾಳಿಯಲ್ಲಿ ತೇಲಿ ಬರುವ ನಿನ್ನುಸಿರೆ ದೀವಿಗೆ
ಬೆಳಗುತಿರಲಿ, ಕತ್ತಲೆ ಸರಿಸಲಿ ನನ್ನ ಪಾಲಿಗೆ
ಕೈ ಕೈ ಹಿಡಿದು ಸಾಗುವ ಹರಸಲಿ ನಮ್ಮ‌ ಜೊಡಿಗೆ.

-SoNi

ಬೇಡ ಮಳೆರಾಯ ಸ್ವಲ್ಪ ನಿಲ್ಲಿಸು

ಬೇಡ ಮಳೆರಾಯ ಸ್ವಲ್ಪ ನಿಲ್ಲಿಸು
ನಾ ಮನೆಗೆ ಹೋಗಿಬಿಡುವೆ
ಆಮೇಲೆ ನೀ ಕಣ್ಣೀರ ಸುರಿಸು
ನಮ್ಮ ರಸ್ತೆಗಳು ಅಚ್ಚುಕಟ್ಟಿಲ್ಲ
ನೀ ಬಿರುಸಾಗಿ ಸುರಿದರೆ ನದಿಯಾಗುವವೆಲ್ಲ
ತೇಲುವ ಗಾಡಿ ನಾ ಕೊಂಡಿಲ್ಲ
ತಡವಾಗಿ ಹೋದರೆ ಹೆಂಡತಿ ಬಿಡಲ್ಲ
ಸೇರಿ ಬಿಡುವೆನು ನಾನು ಮನೆಯನು
ಕರುಣೆ ತೋರಿಸು... ಕರುಣೆ ತೋರಿಸು
ನಿನಗೆ ತಾನೆ ಯಾರು ಮಾಡುತಿರುವರು ಇಷ್ಟು ಬೇಸರ
ಕಣ್ಣೀರ ಹೊಳೆ ಹರಿಸುವೆಯಲ್ಲ ಮರೆಯಾದೊಡೆ ಭಾಸ್ಕರ
ಸಂಜೆಯೆಂದರೆ ನಿನಗೆ ಯಾಕೆ ಇಷ್ಟೊಂದು ಅಪಸ್ವರ
ಓಡಿಹೋಗಿಹಳೆ ನಿನಗೂ ಕೈ ಕೊಟ್ಟು ನಿನ್ನ ಅಪ್ಸರ?
ಬೇಡ ಮಳೆರಾಯ ಸ್ವಲ್ಪ ನಿಲ್ಲಿಸು
ನಾ ಮನೆಗೆ ಹೋಗಿಬಿಡುವೆ
ಆಮೇಲೆ ನೀ ಕಣ್ಣೀರ ಸುರಿಸು
ನಿನ್ನ ಕಣ್ಣೀರಿಗೆ ಇಲ್ಲಿ ತುಂಬಾ ಬೆಲೆಯುಂಟು
ನೀ ಅಳುವುದನ್ನೆ ಕಾದು ಕುಳಿತ ಮಂದಿ ಬಹಳುಂಟು
ಅತ್ತುಬಿಡು ನೀ ಅತ್ತು ಬಿಡು ಬಿಕ್ಕಿ ಬಿಕ್ಕಿ ಅತ್ತುಬಿಡು
ನಾ ಮನೆಗೆ ಹೋಗಿ ಸೇರುವವರೆಗು ಸುಮ್ಮನೆ ಇದ್ದುಬಿಡು..ಸುಮ್ಮನೆ ಇದ್ದುಬಿಡು!

-SoNi